Saturday 28 January, 2023

ಅನುಭವ ಅಲ್ಲ... ಅನುಭಾವ








ಒಂದು
ಮೊಟ್ಟೆಯ ಕಥೆ ಸಿನಿಮಾದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರು ಪ್ರಕಾಶ್ ತೂಮಿನಾಡು ಅವರಲ್ಲಿ ತಾನು ಬರೆದ ಪತ್ರವನ್ನು ಓದುವಾಗ ಅದು ಅನುಭವ ಅಲ್ಲಅನುಭಾವಎಂಬ ಮಾತು ಹೇಳುತ್ತಾರೆ.

ಅನುಭವ ಮತ್ತು ಅನುಭಾವದ ನಡುವೆ ಒಂದು ಧೀರ್ಘದ ವ್ಯತ್ಯಾಸವಾದರೂ ಇವೆರಡರ ನಡುವಿನ ಅಂತರ ಸ್ವಂತಕ್ಕೆ ವೇದ್ಯವಾದಾಗ ಮಾತ್ರ ತಿಳಿಯಬಹುದು.

ಇದೇ ಅನುಭವ ಮತ್ತು ಅನುಭಾವ ಮೇಳೈಸುವುದು ಚಾರಣದ ಮಧುರ ಯಾತನೆಯಲ್ಲಿ ಮಾತ್ರ.

ಅಲ್ಲಿ ಅನುಭವ ಒಂದೇ ಆದರೂ ಅನುಭಾವ ಮಾತ್ರ ವಿಭಿನ್ನ. ಚಾರಣ ಎಂದಾಕ್ಷಣ ಗುಡ್ಡ, ಬೆಟ್ಟ ಹತ್ತುವುದು ಎಂಬ ಸಾಮಾನ್ಯ ಅನಿಸಿಕೆಯಾದರೂ ಅದರಳೊಗಣ ಆನಂದ ಅನಿರ್ವಚನೀಯ

ನೋಡಗರೆಲ್ಲರಿಗೂ ಗುಡ್ಡ ಒಂದೇ…‌ಬೆಟ್ಟವೂ ಒಂದೇಪ್ರತಿಯೊಬ್ಬನೂ ಪ್ರತಿ ಬಾರಿ ಮಾಡುವ ಚಾರಣವೂ ಒಂದೇಆದರೆ ಪರಿಸರ, ಪ್ರಕೃತಿ ಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅನುಭವ ಅಲ್ಲಅನುಭಾವ ಸ್ಪುರಣಗೊಳ್ಳುತ್ತಾ ಸಾಗುತ್ತದೆ.

ಅಲ್ಲೊಂದು ಕಲ್ಲುಇಲ್ಲೊಂದು ತೊರೆಸನಿಹದಲ್ಲೇ ಬೃಹತ್ ಗಾತ್ರದ ಮರ, ಹೊಸ ನಿನಾದ ಮೂಡಿಸುವ ಹಕ್ಕಿಗಳಿಂಚರಎತ್ತರದಿಂದ ಧುಮ್ಮಿಕ್ಕುವ ಜಲಧಾರೆಬಿರುಬಿಸಿಲಿನಲ್ಲೂ ಬೋಳುಬೋಳಾದ ಗುಡ್ಡವನ್ನೇರಿ ತುತ್ತ ತುದಿಯಲ್ಲಿ ನಿಂತಾಗ ಮೈಗೆ ಸೋಕುವ ಕುಳಿರ್ಗಾಳಿಎಲ್ಲವೂ ಅನುಭವದಲ್ಲಿ ಒಂದೇ ಅನಿಸಿದರೂ, ಅನುಭಾವ ಮಾತ್ರ ಭಿನ್ನ.

ಚಾರಣದ ಆರಂಭದಿಂದ ಗುರಿ ಮುಟ್ಟುವ ವರೆಗೆ ಸಾಗಿದ ಹಾದಿ, ಹಿಂದೆ ಮಾಡಿದ ಚಾರಣದ ಅನುಭವ ಮೂಡಿಸಿದರೂ, ಸುತ್ತಮುತ್ತ ಕಾಣುವ ಹಚ್ಚ ಹಸಿರ ಬನಸಿರಿಯ ನಡುವೆ ಪ್ರತಿ ಬಾರಿಯೂ ಜತೆಯಾಗುವ ಚಾರಣಿಗರ ಭಿನ್ನ ಭಿನ್ನ ಅಭಿರುಚಿಯ ಜತೆಗೆ ಸೇರುವ ನಮ್ಮ ಅಭಿರುಚಿ ಅನುಭಾವಕ್ಕೆ ಮಾತ್ರ ನಿಲುಕುವಂತದ್ದು.

ಒನಕೆಯಂತೆ ಕಾಣುವ ಕಾರಣಕ್ಕೆ ಒನಕೆ ಅಬ್ಬಿ, ಬೆಳ್ಳಿಯ ದಾರವೊಂದು ಇಳಿದು ಬಂದಂತೆ ಕಾಣುವ ಕಾರಣಕ್ಕೆ ಬೆಳ್ಳಿಗುಂಡಿ, ಬೆಣ್ಣೆಯಂತೆ ಕಾಣುವ ಕಾರಣಕ್ಕೆ ಬೆಣ್ಣೆ ಫಾಲ್ಸ್

ಹೀಗೆಮೇಲಿಂದ ಧುಮ್ಮಿಕ್ಕುವ ನೀರೇ ಆದರೂ ಅದರ ಗಾತ್ರ, ಎತ್ತರ, ಕಾಣುವ ಅಂದಕ್ಕೆ ತಕ್ಕಂತೆ ಅವುಗಳಿಗೆ ನೀಡಿದ ಹೆಸರು ಅನೇಕ. ಇವೆಲ್ಲವೂ ಅನುಭವಕ್ಕೆ ಸಿಗದೆ ಅನುಭಾವಕ್ಕೆ ನಿಲುಕುವಂತದ್ದೇ ಸರಿ.

ಬೆಟ್ಟದ ಮೇಲೆ ನಿಂತು 360 ಡಿಗ್ರಿಯಲ್ಲಿ ಕಣ್ಣಿನ ದೃಷ್ಟಿ ಹರಿಸಿದಾಗ ಕಾಣುವ ಉಬ್ಬುತಗ್ಗುಗಳ ಗಿರಿಕಂದರಗಳ ಸಾಲು ಸಾಲು ಹರಿದ್ವರ್ಣದ ಕಾಡು ಮೈಮನಗಳಿಗೆ ನೀಡುವ ಅನುಭೂತಿ ಅದು ಪಟ್ಲ ಬೆಟ್ಟವೇ, ಮುಳ್ಳಯ್ಯನಗಿರಿಯೇ, ಕುಮಾರ ಪರ್ವತವೇ, ನಿಶಾನಿ ಮೊಟ್ಟೆಯೇಯಾವುದೇ ಆಗಿರಲಿ ನೋಡಲು ಒಂದೇ ತೆರನಾದರೂ ಕಾಣುವ ಅಂದ ಅಲ್ಲಿ ನಿಂತಾಗಲಷ್ಟೇ ಅನುಭಾವಕ್ಕೆ ಸಿಲುಕುವಂತದ್ದು.

ತಾನೇ ಎಲ್ಲ ಎಂಬ ಭಾವದೊಂದಿಗೆ ಊರಿಗೆ ಊರನ್ನೇ ಆಳಿದ ಅರಸರು ಕಟ್ಟಿದ ಕೋಟೆ ಕೊತ್ತಲಗಳು ಅನಾಥವಾಗಿ ಎಲ್ಲವೂ ನಶ್ವರ ಎಂಬ ಸತ್ಯದರ್ಶನ ಕವಲೇದುರ್ಗ, ಮಿರ್ಜಾನ ಕೋಟೆ, ಬಲ್ಲಾಳರಾಯನ ದುರ್ಗ, ಮಂಜಿರಾಬಾದ್‌ಗಳ ಮೇಲೆ ನಿಂತು ಪಾಳುಬಿದ್ದ ಬುರುಜುಗಳನ್ನು ನೋಡಿದಾಗ ಹೃದ್ಯವಾಗುತ್ತದೆ.

ಎತ್ತರದಲ್ಲಿ ನಿಂತಾಗಲಷ್ಟೇ ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ಕಾಣುವ ವಿಶಾಲ ಭೂಮಿಯಲ್ಲಿ ನಾವೆಷ್ಟು ಸಣ್ಣವರು ಎಂಬ ಅನುಭೂತಿ ಮೂಡಲು ಸಾಧ್ಯ.

ಪ್ರಕೃತಿಯ ಒಡಲಲ್ಲಿ ಒಂದಾಗಿ ತನ್ನನ್ನು ತಾನು ಮರೆತಾಗ ಸಿಗುವುದೇಅನುಭವ ಅಲ್ಲಅನುಭಾವ.

No comments:

Post a Comment